ಸ್ವತಂತ್ರ ಪೂರ್ವದ ಹಿಂದೆ ನಡೆದ ಘಟನೆ,
ಮುಂಬೈ ನಗರದ ರೈಲ್ವೆ ನಿಲ್ದಾಣ, ಬೆಂಗಳೂರಿನಿಂದ ರೈಲು ಬಂದು ನಿಂತಿತ್ತು. ಮೈಸೂರಿನ ದಿವಾನರಾದ ಮಾಧವರಾಯರು ಕಾರ್ಯನಿಮಿತ್ತವಾಗಿ ದೆಹಲಿಗೆ ಹೊರಟಿದ್ದರು. ಮುಂಬೈ ರೈಲ್ವೆ ನಿಲ್ದಾಣದಲ್ಲಿ ದೆಹಲಿಗೆ ಹೋಗಲು ರೈಲನ್ನು ಬದಲಿಸಬೇಕಿತ್ತು. ದೆಹಲಿಗೆ ಹೊರಡುವ ರೈಲು ಇನ್ನು ಬಂದಿರಲಿಲ್ಲ ಸುಮಾರು ೫ ಘಂಟೆ ರೈಲ್ವೆ ನಿಲ್ದಾಣದಲ್ಲಿ ಕಾಯಬೇಕಿತ್ತು. ಆಗ ಮೈಸೂರಿನ ದಿವಾನರು ಬದಲಿ ರೈಲು ಬರುವ ಒಳಗೆ ಪೇಟೆ ಸುತ್ತಿ ಬರುವ ಯೋಚನೆ ಮಾಡಿ ಹೊರಟು ಹೋದರು.
ಮೈಸೂರಿನ ದಿವಾನರ ಪ್ರಯಾಣವನ್ನು ಪತ್ರಿಕೆಯ ಮೂಲಕ ಅರಿತಿದ್ದ, ಸುಮಾರು ೮೨ ವರ್ಷದ ವ್ಯಕ್ತಿಯೊಬ್ಬರು ದಿವಾನರನ್ನು ಕಾಣಲು ಬಂದರು. ಅವರಿಗೆ ದಿವಾನರು ಇಲ್ಲದಿರುವುದು ಅವರ ಆಪ್ತಕಾರ್ಯದರ್ಶಿಯಿಂದ ತಿಳಿಯಿತು. ಅ ೮೨ ವರ್ಷದ ವ್ಯಕ್ತಿಯನ್ನು ಗುರುತಿಸಿದ ದಿವಾನರ ಆಪ್ತಕಾರ್ಯದರ್ಶಿ ಅವರನ್ನು ದಿವಾನರ ಬೋಗಿಯೊಳಗೆ ಕುಳಿತು ಕೊಳ್ಳಲು ಮನವಿ ಮಾಡಿದರು.
” ದಿವಾನರು ಇಲ್ಲದಾಗ ಅವರ ಕೋಣೆಯನ್ನು ಪ್ರವೇಶಿಸುವುದು ಉಚಿತವಲ್ಲ ” ಎಂದು ಹೇಳಿ ನಯವಾಗಿ ತಿರಸ್ಕರಿಸಿದರು ಅ ಹಿರಿಯರು.
ದಿವಾನರು ದೆಹಲಿಗೆ ಹೊರಡುವ ಮುನ್ನ ಆಂಗ್ಲರ ನೀತಿಯನ್ನು ದಿಕ್ಕರಿಸಿದ ಮೈಸೂರಿನ ಜನತೆ , ಅಂಗ್ಲರ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು. ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಅಂಚೆ ಕಛೇರಿಗೆ ಬೆಂಕಿ ಹಚ್ಚಿದ್ದರು , ರೈಲ್ವೆ ಕಂಬಿ ಕಿತ್ತರು , ಪ್ರತಿಭಟನೆ ಇನ್ನಷ್ಟು ಉಗ್ರವಾಯಿತು. ಅಗ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡು ಹಾರಿಸಿದರು, ಹಲವಾರು ನಾಗರೀಕರು ಪ್ರಾಣ ತೆತ್ತರು.
ಇದರ ಸಲುವಾಗಿ ಅ ಹಿರಿತೆಲೆ ದಿವಾನರ ಹತ್ತಿರ ಮಾತನಾಡಲು ಬಂದಿದ್ದರು.
ದಿವಾನರು ಆಪ್ತ ಕಾರ್ಯದರ್ಶಿಯವರು ಹಿರಿಯರ ಯೋಗಕ್ಷೇಮ ವಿಚಾರಿಸಿದರು, ನಂತರ ಮಾತುಕತೆ ರಾಜ್ಯದ ಈಗಿನ ಪರಿಸ್ಥಿತಿಯ ಕಡೆಗೆ ಹೊರಟಿತು.
” ಪರಿಸ್ಥಿತಿ ಹದಗೆಟ್ಟಿತ್ತು, ಬೇರೆ ದಾರಿಯಿರಲಿಲ್ಲ , ಗುಂಡು ಹಾರಿಸಲೇ ಬೇಕಾಯಿತು” ಎಂದು ಕಾರ್ಯದರ್ಶಿಗಳು ಹೇಳಿದರು.
” ಮೈಸೂರಿನ ಜನ ಸೌಮ್ಯ ಸ್ವಭಾವದವರು, ಅವರು ಹೀಗೆಲ್ಲಾ ಮಾಡುವುದಿಲ್ಲ , ಸರ್ಕಾರ ಸರಿಯಾದ ಕ್ರಮ ತಗೆದು ಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ ” ಎಂದು ಹೇಳಿ, ಇದು ಸರ್ಕಾರದ ತಪ್ಪು ಎಂದು ವಿಷಾದ ವ್ಯಕ್ತಪಡಿಸಿದರು ಅ ಹಿರಿಯರು.
ಮಾತುಕತೆ ಬೇರೆ ಕಡೆ ಹೊರಳಿದ್ದನ್ನು ಅರಿತ ಆಪ್ತ ಕಾರ್ಯದರ್ಶಿಗಳು ಮಾತನ್ನು ಮುಂದುವರೆಸದಿರಲು ನಿರ್ಧರಿಸಿ. ಹಿರಿಯರಿಗೆ ದಿವಾನರ ಕೋಣೆಯ ಒಳಗೆ ಕೂರಲು ಮತ್ತೊಮ್ಮೆ ಮನವಿ ಮಾಡಿದರು. ಪ್ರಯತ್ನ ಮತ್ತೆ ವಿಫಲವಾಯಿತು.
ನಂತರ ಅದೇ ಜಾಗದಲ್ಲಿ ಅ ಹಿರಿಯರು ತಾವು ತಂದಿದ್ದ ಆಸ್ಟ್ರೇಲಿಯಾ ದೇಶದ ಅರ್ಥಿಕ ಮಾಸ ಪತ್ರಿಕೆಯನ್ನು ತಗೆದು ನಿಂತು ಕೊಂಡೆ ಓದಲು ಆರಂಭಿಸಿದರು. ಸದಾ ಕಿವಿಗಡಚಿಕ್ಕುವ ಮುಂಬೈ ನಿಲ್ದಾಣ ಆದರೂ ಏಕಾಗ್ರತೆ ಮತ್ತು ಸಮಚಿತ್ತದಿಂದ ವರ್ತಮಾನ ಪತ್ರಿಕೆ ಓದುತಿದ್ದ ಹಿರಿಯರನ್ನು ಕಂಡ ದಿವಾನರ ಆಪ್ತ ಕಾರ್ಯದರ್ಶಿ ಅ ಹಿರಿಯರಿಗೆ ತೆಲೆದೊಗಿದರು.
ಸ್ವಲ್ಪ ಸಮಯದ ನಂತರ ದೆಹಲಿಗೆ ಹೊರಡುವ ರೈಲು ಬಂತು. ದಿವಾನರಿಗೆ ಕಾಯ್ದಿರಿಸಿದ ಬೋಗಿ ಒಳಗೆ ಕುಳಿತು ಕೊಳ್ಳುವಂತೆ ಹಿರಿಯರಿಗೆ ಮಾಡಿದ ಪ್ರಯತ್ನ ಮಗದೊಮ್ಮೆ ವಿಫಲವಾಯಿತು.
ಸ್ವಲ್ಪ ಸಮಯದ ನಂತರ ದಿವಾನರು ಬಂದರು. ಹಿರಿತಲೆಯನ್ನು ಕಂಡ ದಿವಾನರು ಅ ಹಿರಿಯರನ್ನು ಆತ್ಮೀಯವಾಗಿ ಸ್ವಾಗತಿಸಿ. ತಮ್ಮ ಕೋಣೆಯೊಳಗೆ ಕರೆದು ಕೊಂಡು ಹೋದರು. ಉಭಯ ಕುಶಲೋಪರಿ ನಂತರ ಮೈಸೂರಿನ ಸ್ಥಿತಿಗತಿಗಳ ಬಗ್ಗೆ ರೈಲು ಹೊರಡುವವರೆಗೂ ಸಮಾಲೋಚನೆ ನಡೆಸಿದರು ಅ ಹಿರಿ ಜೀವ.
ಅ ಹಿರಿ ಜೀವ ಯಾರು ಎಂದು ನಿಮಗೆ ಗೊತ್ತಾಗಿದ್ದರೆ ಅದು ನನ್ನ ಭಾಗ್ಯವೆಂದೆ ಹೇಳಬೇಕು.
ಅ ಹಿರಿ ಜೀವ ಮತ್ತಾರು ಅಲ್ಲ ” ಮೋಕ್ಷಗುಂಡಂ ವಿಶ್ವೇಶ್ವರಯ್ಯ “, ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮಾಧವರಾಯರು ವಿಶ್ವೇಶ್ವರಯ್ಯನವರ ಆಪ್ತ ಕಾರ್ಯದರ್ಶಿಗಳು ಆಗಿದ್ದರು. ಅದರೂ ತಾನು ಮಾಜಿ ದಿವಾನನೆಂದು ದರ್ಪ ಮೆರೆಯಲಿಲ್ಲ. ದಿವಾನರು ಬರುವವರೆಗೂ ಅವರಿಗೆ ಗೌರವ ಸೂಚಕವಾಗಿ ನಿಂತೇ ಇದ್ದರು. ಮುಂಬೈಯಲ್ಲಿದ್ದರೂ ಸದಾ ಮೈಸೂರಿನ ಏಳಿಗೆಯನ್ನು ಬಯಸುತಿತ್ತು ಅ ಜೀವ.
ಸಜ್ಜನಿಕೆ , ಸೌಜನ್ಯತೆ , ಗೌರವ , ದೇಶಭಕ್ತಿ , ಸಮಚಿತ್ತ ಮನಸ್ಸು ಇವೆಲ್ಲಕ್ಕೆ ಸಮಾನರ್ಥಕ ಪದವೇ ಮೋಕ್ಷಗುಂಡಂ ವಿಶ್ವೇಶ್ವರಯ್ಯ.
ಸದಾ ವೇದಿಕೆಯ ಮೇಲೆ ನಿದ್ದೆ ಮಾಡುವ , ಕಲಾಪಕ್ಕೆ ಬರದ, ಸದನದಲ್ಲಿ ಸನ್ನಿ ಹಿಡಿದವರಂತೆ ಬಟ್ಟೆ ಹರಿದು ಕೊಂಡು ಪ್ರತಿಭಟಿಸುವ, ಸದಾ ವಿರೋಧ ಪಕ್ಷ ದ ಮೇಲೆ ಗೊಬೆ ಕೋರಿಸುವ , ಎಲುಬಿಲ್ಲದ ನಾಲಗೆಯನ್ನು ಮನಬಂದಂತೆ ತಿರುಗಿಸುವ, ತನ್ನನ್ನು ಚುನಾಯಿಸಿದ ಕ್ಷೇತ್ರದಿಂದ ಸದಾ ದೂರ ಉಳಿದು ಚುನಾವಣೆ ಬಂದಾಗ ಕ್ಷೇತ್ರಕ್ಕೆ ಕಾಲಿಡುವ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ, ಅಧಿಕಾರಕ್ಕಾಗಿ ಮಣ್ಣು, ಜಲ, ಭಾಷೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿ ಆಮೇಲೆ ಕೈ ಕೋಡುವ , ಸಮಾಜದಲ್ಲಿ ಸ್ತ್ರೀಯರನ್ನು ಮತ್ತು ಮಕ್ಕಳನ್ನು ಗೌರವದಿಂದ ಕಾಣದ, ನೀತಿಗೆಟ್ಟ, ಲಜ್ಜೆಗೆಟ್ಟ , ದೇಶಾಭಿಮಾನವಿಲ್ಲದ ನಾಯಕರನ್ನು ಹಿಂದೆ ನೀವು ಅರಿಸಿದ್ದಿರಿ, ಮತ್ತೊಮ್ಮೆ ತಪ್ಪು ಮಾಡಬೇಡಿ.
ಮತದಾನ ನಿಮ್ಮ ಹಕ್ಕು . ಜಾತಿ, ಹಣ ,ಹೆಂಡಕ್ಕೆ ನಿಮ್ಮನ್ನು ಮಾರಿಕೊಳ್ಳ ಬೇಡಿ.
ಇಂತಹ ನಾಯಕರು ನಮಗೆ ಬೇಕೇ, ನಿರ್ಧರಿಸಲು ಇದು ಸಕಾಲ .
ಇನ್ನಾದರೂ ಎಚ್ಚರವಾಗು ಭವ್ಯ ಭಾರತದ ನಾಗರೀಕ..
ಅತ್ಯಂತ ಜಾಗರೂಕತೆಯಿಂದ ನಿನ್ನ ಮತ ಚಲಾಯಿಸು..