ನಾವು ಯಾವುದೇ ಎರಡು ಚಕ್ರಕ್ಕಿಂತ ಹೆಚ್ಚು ಗಾಲಿಗಳು ಇರುವ ವಾಹನವನ್ನು ಹತ್ತುವಾಗ ಕಿಟಕಿ ಪಕ್ಕ ಕೂರುವುದು ಸಹಜ, ಅದರಲ್ಲೂ ಬಸ್, ರೈಲು , ವಿಮಾನದಲ್ಲಿಯೂ ಸಹ ಹಾಗೆ ಮಾಡುತ್ತೇವೆ. ವಿಮಾನ ಹತ್ತಲು ಬೋರ್ಡಿಂಗ್ ಪಾಸ್ ಪಡೆಯುವ ಸಮಯದಲ್ಲಿ ಹಲವರು ವಿಮಾನದ ಸಿಬ್ಬಂದಿ ಹತ್ತಿರ ‘ ದಯವಿಟ್ಟು , ಕಿಟಕಿ ಕಡೆ ಇರುವ ಆಸನ ಕೊಡಿ’ ಎಂದು ಬೇಡುವುದನ್ನು ನೋಡಿರುತ್ತೇವೆ ಇಲ್ಲವೇ ನಾವೇ ಬೇಡಿರುತ್ತವೆ.
ಹಾಗೆಯೇ ಹಡಗೇರುವ ಸಮಯದಲ್ಲಿ ನಮ್ಮ ಕ್ಯಾಬಿನ್ಗೆ ಕಿಟಕಿ ಇದ್ದರೆ ಚೆನ್ನ , ಹಾಗಾಗಿ ಬೋರ್ಡಿಂಗ್ ಪಾಸ್ ಪಡೆಯುವ ಸಮಯದಲ್ಲಿ ಸಾಗರದ ವಿಹಂಗಮ ದೃಶ್ಯ ಕಾಣುವ ಕಿಟಕಿ ಇದ್ದರೆ ಎಷ್ಟು ಚೆನ್ನ ಎಂದು ಆಲೋಚಿಸಿ, ಬೋರ್ಡಿಂಗ್ ಪಾಸ್ ಪಡೆಯುವ ಸಮಯದಲ್ಲಿ ದಯವಿಟ್ಟು ನಮಗೂ ಸಹ ಒಂದು ಕ್ಯಾಬಿನ್ ಕೊಡಿ ಎಂದು ಕೇಳಬೇಕೆಂದು ಇದ್ದೆ, ಆದರೆ ಅದೇ ಗಡಿಬಿಡಿಯಲ್ಲಿ ಮರೆತು ಬೋರ್ಡಿಂಗ್ ಪಾಸ್ ಪಡೆದಿದ್ದೆ. ಮತ್ತೆ ಅದು ನೆನಪಿಗೆ ಬಂದದ್ದು ಹಡಗನ್ನು ಏರಿದಾಗ, ಹಾಗಾಗಿ ನಮ್ಮ ಪಾಸ್ನಲ್ಲಿದ್ದ ಕ್ಯಾಬಿನ್ ಅನ್ನು ಹುಡುಕುತ್ತ ಮೊದಲು ನಮ್ಮ ಕ್ಯಾಬಿನ್ ಹಾಗು ವಿಂಡೋ ಹೇಗಿದೆ ಎಂಬುದಕ್ಕೆ ತೆರೆ ಬಿದ್ದದ್ದು ನಮ್ಮ ಕ್ಯಾಬಿನ್ ಪ್ರವೇಶಿಸಿದಾಗಲೇ.
ಕ್ಯಾಬಿನ್ ಒಳಗೆ ಹೋಗುತ್ತಿದ್ದಂತೆ ಕಂಡದ್ದು , ಕೋಣೆಯು ಸುಮಾರು ೧೦ * ೧೮ ಅಡಿ ಇರಬಹುದು, ಒಂದು ಮೂಲೆಗೆ ಪುಟ್ಟದಾದ ಶೌಚಾಲಯ , ಒಂದು ಪುಟ್ಟ ಕಿಟಕಿ, ಒಬ್ಬರು ಮೇಲಿನ ಬರ್ತ ನಲ್ಲಿ ಮತ್ತೊಬ್ಬರು ಕೆಳಗಿನ ಬರ್ತ ನಲ್ಲಿ ಒಂದು ರೀತಿ ಮಕ್ಕಳು ಮಲಗುವ ಹಾಸಿಗೆ ರೀತಿಯ ಹಾಸಿಗೆ, ಪುಟ್ಟದಾದ ಮೇಜು, ಎರಡು ಕುರ್ಚಿ, ಮೇಜಿನ ಮೇಲೆ ಎರಡು ಬಾಟಲ್ ನೀರು, ಸೇಬು ಮತ್ತು ಕಿತ್ತಳೆ ಹಣ್ಣು ಅದಾಗಲೇ ಆಸೀನವಾಗಿತ್ತು. ನಮ್ಮ ಪರಿಕರಗಳನ್ನು ಸುರಕ್ಷಿತವಾಗಿ ಇಡಲು ಒಂದು ಕಪಾಟು , ಒಂದು ಫ್ಯಾನ್ , ನಾಲ್ಕು ಲೈಫ್ ಜಾಕೇಟ್ , ಎರಡನ್ನು ದಿನ ಬಳಕೆಗೆ , ಮತ್ತೆರಡನ್ನು ಅಪಾಯದ ಸಂದರ್ಭದಲ್ಲಿ ಅಂದರೆ ಹಡಗಿಗೆ ಅಪಾಯವಾದಾಗ ಬಳಸಲು ಎಂಬರ್ಥ. ಒಂದು ಸ್ಪೀಕರ್ ( ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೂಚನೆ ಕೊಟ್ಟಂತೆ ಇನ್ಫಾರ್ಮಶನ್ ರೂಮ್ ನಿಂದ ಆಗಾಗ ನಮಗೆ ಅಗತ್ಯದ ಸಂದೇಶ ಕೊಡಲು). ಎಲ್ಲವೂ ಅಚ್ಚುಕಟ್ಟಾಗಿತ್ತು. ಹಾಗಾಗಿ ಎ ಸಿ ಸರಿಯಿದೆಯೇ, ನೀರು ಬರುತ್ತಿದೆಯೇ, ಬಿಸಿ ನೀರು ಬರುತ್ತದೆಯೇ, ದೀಪ , ಫ್ಯಾನ್ ಉರಿಯುತ್ತಿದೆಯೇ ಎಂದು ಪರೀಕ್ಷಿಸಿ ಮುಂದೆ ಕ್ಯಾಬಿನ್ ಬೀಗ ಎಲ್ಲಿ ಸಿಗುತ್ತಿಲ್ಲ ಎಂಬ ಆತಂಕ ಎದುರಾಯಿತು.
ಅಕ್ಕ ಪಕ್ಕದ ಕ್ಯಾಬಿನ್ ಸಹ ಪ್ರವಾಸಿಗರನ್ನು ಕೇಳಿದಾಗ ನಮಗೆ ಬೀಗ ಸಿಕ್ಕಿದೆ ಎನ್ನುವ ಉತ್ತರ ಬರಬೇಕೆ, ಬೀಗವಿಲ್ಲದೆ ಪರಿಕರಗಳು ಇಲ್ಲಿ ಅಸುರಕ್ಷಿತ ಎಂಬ ಭಯದಿಂದ ಟೂರ್ ಮ್ಯಾನೇಜರ್ ಹುಡುಕಿ ಕೊಂಡು ಕೇಳಿದ್ದಾಯಿತು. ಬೀಗಗಳು ಇವೆ ಆದರೆ ಅವು ಯಾವು ಕೆಲಸ ಮಾಡುವುದಿಲ್ಲ ಅದು ನಿಮ್ಮ ಸಹ ಪ್ರಯಾಣಿಕರಿಗೆ ಗೊತ್ತಿಲ್ಲ, ನಿಮ್ಮ ವಸ್ತುಗಳನ್ನು ಬೀರುವಿನ ಒಳಗೆ ಇಟ್ಟು ಚೀಲಕಕ್ಕೆ ಬೀಗ ಹಾಕಿ, ಬೀಗವು ಇಲ್ಲದಿದ್ದರೆ ಕೆಳಗೆ ಸ್ಟೋರ್ ಅಲ್ಲಿ ಸಿಗುತ್ತದೆ . ಇಲ್ಲಿ ಎಲ್ಲವೂ ಸೇಫ್ , ಯೋಚನೆ ಮಾಡಬೇಡಿ ಎಂದು ಹೇಳಿ ಕಳುಸಿದ. ನಾವು ಹೇಗಿದ್ದರೂ ನಾಲ್ಕು ಬೀಗ ತಂದಿದ್ದೆವು ಹಾಗಾಗಿ ಜಾಸ್ತಿ ಯೋಚನೆ ಮಾಡದೇ ಕ್ಯಾಬಿನ್ ಕಡೆ ಮುಖ ಮಾಡಿದೆ. ಕ್ಯಾಬಿನ್ ಕಡೆ ಬರುತ್ತಿದ್ದಂತೆ ನಮ್ಮ ಸಹ ಪ್ರಯಾಣಿಕರು ಬೀಗ ಕೆಲಸ ಮಾಡುತ್ತಿಲ್ಲ ಎಂಬ ಅಸಹಾಯಕತೆ ಪ್ರದರ್ಶಿಸಿದರು. ನಾನು ಟೂರ್ ಮ್ಯಾನೇಜರ್ ಹೇಳಿದ ಉತ್ತರವನ್ನೇ ಅವರಿಗೂ ನೀಡಿದೆ, ನಾನೂ ಒಮ್ಮೆ ಕೇಳಿ ಬರುತ್ತೇನೆ ಎಂದು ಆತ ಅವನನ್ನು ಹುಡುಕಿಕೊಂಡು ಹೋದ.
ಸ್ವಲ್ಪ ಸಮಯದಲ್ಲಿ ಊಟ ತಯಾರಾಗಿದೆ, ಮೊದಲಿಗೆ ಮೂರು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು ಬನ್ನಿ ಎಂದು ಕೋಣೆಯ ಸ್ಪೀಕರ್ ನಲ್ಲಿ ಘೋಷಣೆ ಮೊಳಗಿತು. ನಾಲ್ಕನೇ ಡೆಕ್ಕಿನಲ್ಲಿ ಹೆಚ್ಚು ಕೋಣೆಗಳು ಇವೆ ನಮ್ಮದು ನಾಲ್ಕನೆಯ ಡೆಕ್ ಆಗಿದ್ದರಿಂದ ನಮ್ಮ ಸರದಿಗಾಗಿ ಕಾದೆವು, ಸಲ್ಪ ಸಮಯದಲ್ಲಿ ನಾಲ್ಕನೇ ಡೆಕ್ಕಿನ ಪ್ರವಾಸಿಗರು ಊಟದ ಕೋಣೆಗೆ ಬನ್ನಿ ಎಂಬ ಕರೆಗೆ ಓಗುಟ್ಟು, ನಾವು ಧಾವಿಸಿದಾಗ ತಿಳಿದಿದ್ದು ಮೊದಲ ಕರೆ ಬಂದಾಗಲೇ ಒಟ್ಟಿಗೆ ಮೂರು, ನಾಲ್ಕು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು ಊಟದ ಕೋಣೆಗೆ ಒಟ್ಟಿಗೆ ಧಾಳಿ ಇಟ್ಟಿದ್ದರು ಎಂಬ ಸಂಗತಿ. ಒಂದು ಕಡೆಗೆ ಸಸ್ಯ ಹಾರದ ಊಟದ ಕೋಣೆ ಮತ್ತೊಂದು ಕಡೆಗೆ ಮಾಂಸಾಹಾರದ ಊಟದ ಕೋಣೆಯೆಂದು ಫಲಕವಿತ್ತು, ಸಾಲಾಗಿ ಸರತಿಯಲ್ಲಿ ನಿಂತು ಬಡಿಸಿಕೊಂಡು ನಮ್ಮ ದೇಹಕ್ಕೆ ಅಗತ್ಯವಿದ್ದ ಪೋಷಣೆ ಮಾಡಿದ್ದಾಯಿತು.
ಹಡಗು ಇನ್ನು ಬಂದರಿನಿಂದ ಹೊರಟಿರಲಿಲ್ಲ, ಹಾಗಾಗಿ ಹಡಗಿನ ಓಪನ್ ಡೆಕ್ ಕಡೆಗೆ ಒಮ್ಮೆ ಹೋಗಿಬರೋಣ ಎಂದು ಹೋದರೆ ಸೂರ್ಯ ಉಗ್ರ ನರಸಿಂಹನ ಅವತಾರದಲ್ಲಿ ಬೆಳಗುತ್ತಿದ್ದ ಅದೇ ಸಮಯಕ್ಕೆ ವಾಯು ನಮ್ಮನ್ನು ತಣ್ಣನೆ ಗಾಳಿಯಿಂದ ಸಂತಯಿಸುತ್ತಿದ್ದ. ಇದಾದ ಸ್ವಲ್ಪ ಸಮಯದಲ್ಲೇ ಹಡಗು ನಿಧಾನವಾಗಿ ಸಾಗರವನ್ನು ಸೀಳಿ ದಾರಿ ಮಾಡಿಕೊಂಡು ಬಂದರನ್ನು ಬಿಟ್ಟು ಪಶ್ಚಿಮದಡೆ ಪ್ರಯಾಣವನ್ನು ಆರಂಭಿಸಿತ್ತು. ಹಡಗಿನ ಓಪನ್ ಡೆಕ್ನಲ್ಲಿ ಕೂತು ಸುತ್ತಲಿನ ಪರಿಸರವನ್ನು ಆಸ್ವಾದಿಸುತ್ತಾ ಇದ್ದಾಗ ಪ್ರವಾಸಿಗರೆಲ್ಲ ಮನೋರಂಜನ ಕೋಣೆಗೆ ಬರಬೇಕು ಎಂದು ಅಲ್ಲಿ ಟೂರ್ ಮ್ಯಾನೇಜರ್ ನಿಮಗಾಗಿ ಕಾಯುತ್ತಿದ್ದರೆಂದು ಹಾಗಾಗಿ ಬರಬೇಕೆಂದು ಅಪ್ಪಣೆಯಾಯಿತು.
ಸುಮಾರು ೮೦ ರಿಂದ ೧೦೦ ಜನ ಒಟ್ಟಿಗೆ ಕೋರಬಹುದಾದ ಒಂದು ಚಿಕ್ಕ ಸಿನಿಮಾ ಮಂದಿರದ ತರಹದ ಕೋಣೆ ಅದು, ಯಾಸಿರ್ ನಗು ಮುಖದಿಂದ ಸ್ವಾಗತಿಸಿ, ಕೋಣೆ ತುಂಬುತ್ತಿದ್ದಂತೆ ಮುಂದಿನ ಪ್ರವಾಸದ ವೇಳಾಪಟ್ಟಿಯನ್ನು ಮುಂದಿಟ್ಟು ಹಾಗೂ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ, ಒಂದೊಂದು ದ್ವೀಪದ ಬಗ್ಗೆ ಮಾಹಿತಿ ನೀಡುತ್ತಿದ್ದನು..
ಹಡಗು ಮುಳುಗಿದರೇ ಏನು ಕತೆ, ನನಗೆ ಎಪ್ಪತ್ತು ವರ್ಷ ಸ್ಕೂಬಾ ಡೈವ್ ಮಾಡಬಹುದಾ, ಧೂಮಪಾನ ಮತ್ತು ಸುರಪಾನ ಮಾಡಬಹುದಾ, ಹುಷಾರ್ ತಪ್ಪಿದರೇ ಏನು ಕತೆ, ನಾವು ಯಾವ ಲೈಫ್ ಜಾಕೆಟ್ ಬಳಸಬೇಕು, ರೂಮ್ಗಳಿಗೆ ಬೀಗಗಳು ಇಲ್ಲ ಕಳ್ಳತನವಾದರೇ ಯಾರು ಜವಾಬ್ದಾರಿ, ಸೀ ಸಿಕ್ನೆಸ್ ಬಂದರೆ, ಮೇಲೆ ಸ್ವಿಮಿಂಗ್ ಪೂಲ್ ಅಲ್ಲಿ ನೀರು ಯಾಕಿಲ್ಲ, ನೀರು ಖಾಲಿಯಾದರೆ ಎಲ್ಲಿ ಸಿಗುತ್ತೆ , ಮೆಡಿಸಿನ್ ಎಲ್ಲಿ ಸಿಗುತ್ತೆ , ಜಿಮ್ ಇದೆಯಾ?, ಟೀವಿಲಿ ಐಪಿಎಲ್ ಬರುತ್ತಾ ಎಂದು ಕ್ರಿಕೆಟ್ ಅಭಿಮಾನಿಗಳು, ಅತ್ತ ಭಾಗ್ಯ ಲಕ್ಷ್ಮಿ ಬರುತ್ತಾ ಅಂತ ನಮ್ಮ ಮನೆಯವರು, ಹೀಗೆ ಪ್ರಶ್ನೆಗಳು ಅವನತ್ತ ತೇಲಿ ಬರುತ್ತಿದ್ದವು ಇವಕ್ಕೆಲ್ಲ ಅನುಭವಿ ಯಾಸಿರ್ ಲೀಲಾಜಾಲವಾಗಿ ಉತ್ತರಿಸುತ್ತಾ ಪ್ರಯಾಣಿಕರ ಸಮಾವೇಶವನ್ನು ಉದ್ದೇಶಿ ಅನುಭವವವನ್ನು ಹಂಚಿಕೊಳ್ಳುತ್ತಿದ್ದನು. ಏನಾದರು ತೊಂದರೆ ಇದ್ದರೆ ನನ್ನನ್ನು ಸಂಪರ್ಕಿಸಲು ತಿಳಿಸಿ , ಪ್ರಯಾಣ ಸುಖಮಯವಾಗಲಿ ಎಂದು ಹಾರೈಸಿ ತನ್ನ ಸಂಭಾಷಣೆಯನ್ನು ಮುಗಿಸಿದನು.
ಯಾಸೀರನ ಸಮಾವೇಶದಲ್ಲಿದ್ದರೂ ಮನಸ್ಸು ಮಾತ್ರ ಬೀಗವಿಲ್ಲದ ನಮ್ಮ ಕೋಣೆಯ ಕಡೆಯಿತ್ತು, ಹಾಗಾಗಿ ಮನೋರಂಜನ ಕೋಣೆಯಿಂದ ನೇರವಾಗಿ ನಾವು ನಮ್ಮ ಕೋಣೆಗೆ ಬಂದು ಎಂದಿನಂತೆ ನಮ್ಮ ಪರಿಕರಗಳು ಸುರಕ್ಷಿತವಾಗಿವೆ ಎಂದು ಖಾತ್ರಿ ಮಾಡಿಕೊಂಡೆವು. ಆಗಲೇ ಉಪಹಾರದ ಕೋಣೆಯಲ್ಲಿ ಸಂಜೆಯ ಕಾಫಿ ಮತ್ತು ಚಹಾ ತಯಾರಿದೆ ಎಂಬ ಸಂದೇಶ ಬಂತು. ಒಂದು ಕಪ್ಪು ಟೀ ಹಿಡಿದು ಸೀದಾ ಹಡಗಿನ ಮೇಲಿನ ಡೆಕ್ಕ ಕಡೆಗೆ ಸೂರ್ಯಾಸ್ತ ನೋಡಲು ಹೊರಟೆವು. ದಿನವೆಲ್ಲ ಉಗ್ರವಾಗಿ ಬೆಳಗಿದ್ದ ರವಿಯು ತಸು ದಣಿದಂತೆ ಕಂಡರೂ ಶಾಂತನಾಗಿ ಸಾಗರದ ಅಂಚಿನಲ್ಲಿ ಮರೆಯಾಗ ತೊಡಗಿದ್ದ, ಹಡಗು ರವಿಯನ್ನು ಸಂತಯಿಸಲು ಸಾಗರವನ್ನು ಸೀಳಿ ಮುನ್ನುಗುತ್ತಿತ್ತು, ಬಾನಲ್ಲಿ ಹುಣ್ಣಿಮೆಯ ಚಂದ್ರ ಅದಾಗಲೇ ಮೂಡಿದ್ದ ಜೊತೆಗೆ ಒಂದಿಷ್ಟು ಬೆಳ್ಳಿ ಚುಕ್ಕೆಗಳನ್ನು ಕರೆ ತಂದಿದ್ದ, ದಿನವೆಲ್ಲ ಶಾಂತವಾಗಿದ್ದ ಸಾಗರವು ಪೂರ್ಣ ಶಶಾಂಕನ ಕಂಡೊಡನೇ ಸಂತೋಷ ತಡೆಯಲಾಗದೇ ಉಬ್ಬರಿಸಿ ಅಬ್ಬರಿಸ ತೊಡಗಿದ, ವಾಯುವು ಸಹ ತನ್ನ ಶಕ್ತಿಯನ್ನು ಕ್ಷಣಕ್ಷಣಕ್ಕೂ ವೃದ್ಧಿಸಿಕೊಳ್ಳುತ್ತಿದ್ದ ಹಾಗಾಗಿ ಬೀಸುವ ಗಾಳಿಗೆ ಎಲ್ಲಿ ನಾವು ಸಮುದ್ರ ಪಾಲಾದೆವೋ ಎಂದು ನಿಧಾವಾಗಿ ಕ್ಯಾಬಿನ್ ಕಡೆಗೆ ವಿಶ್ರಮಿಸಲು ಹೊರಟೆವು.
ಅದಾಗಲೇ ಸುಮಾರು ಹೊತ್ತಾಗಿತ್ತು ‘ಊಟ ತಯಾರಿದೆ’ ಎಂಬ ಸಂದೇಶವು ಸ್ಪೀಕರ್ ಮೂಲಕ ಬಂತು, ಊಟ ಮುಗಿಸಿ , ಮತ್ತೊಂದು ಬಾರಿ ಹಡಗಿನ ಓಪನ್ ಡೆಕ್ ಅಲ್ಲಿ ವಾಯು ವಿಹಾರ ಮಾಡಿ, ವಾಪಾಸ್ ಕೋಣೆಗೆ ಹಿಂತಿರುಗಿದೇವು. ನಾಳೆ ಭೇಟಿ ನೀಡಲಿರುವ ದ್ವೀಪಕ್ಕೆ ಅಗತ್ಯವಿರುವ ವಸ್ತುಗಳನ್ನು ಒಂದು ಚೀಲಕ್ಕೆ ಹಾಕಿ, ರೂಮಿನ ಚೀಲಕ ಜಡಿದು ಹಾಸಿಗೆ ಮೇಲೆ ಮಲಗುತ್ತಿದ್ದಂತೆ, ನಾಳೆಯ ಮಿನಿ ಕಾಯ್ ದ್ವೀಪದ ಚಿತ್ರಗಳು ಒಂದೆಡೆ , ಇತ್ತ ಕಡೆ ಬೀಗವಿಲ್ಲದೇ ಪರಿಕರಗಳು ಸುರಕ್ಷಿತವೇ ಎಂಬ ವಾದಗಳು ಮನದಲ್ಲಿ ಮೂಡುತ್ತಿದ್ದಂತೆ ನಿದ್ರಾದೇವಿಯ ಪರವಶವಾದೆವು….
ಮುಂದಿನ ವಾರ : ದೋಣಿ ಸಾಗಲಿ ಮುಂದೆ ಹೋಗಲಿ ದೂರ ದ್ವೀಪವ ಸೇರಲಿ…